ಭಾರತದ ಕನಸುಗಾರ ಡಾ|| ಎ.ಪಿ.ಜೆ.ಅಬ್ದುಲ್ ಕಲಾಮ್. India's Dream man Dr.APJ Abdul Kalam : an article by Kumar B Bagival
ಭಾರತದ ಕನಸುಗಾರ ಡಾ|| ಎ.ಪಿ.ಜೆ.ಅಬ್ದುಲ್ ಕಲಾಮ್. ಕನಸೊಂದರ ಕಾಲುದಾರಿ ಹೆದ್ದಾರಿಯಾದ ಪರಿ… "ನೀನು ಸೂರ್ಯನಂತೆ ಪ್ರಜ್ವಲಿಸಬೇಕಾದರೆ ಮೊದಲು ಆ ಸೂರ್ಯನಂತೆ ದಹಿಸಬೇಕು" - ಡಾ|| ಎ.ಪಿ.ಜೆ. ಅಬ್ದುಲ್ ಕಲಾಮ್ ನಿಷ್ಠೆ, ಪರಿಶ್ರಮ,ತೊಡಗಿಸಿಕೊಳ್ಳುವಿಕೆ,ಏಕಾಗ್ರತೆ, ತನ್ನಲ್ಲಿನ ಆತ್ಮವಿಶ್ವಾಸ, ಕನಸು…. ಇದ್ದರೆ ಏನನ್ನಾದರೂ ಸಾಧಿಸಬಹುದು ಮತ್ತು ಆ ಸಾಧಕನನ್ನ ಸ್ಥಾನ ತಾನಾಗಿಯೇ ಹುಡುಕಿಕೊಂಡು ಬರುತ್ತದೆ,ಹೆಸರು ನೂರ್ಕಾಲ ಜಗಜನಿತವಾಗುತ್ತದೆ. ಹಾಗು ಯಶಸ್ಸು ಸಿಕ್ಕ ನಂತರವೂ ತನ್ನತನವನ್ನು ಬಿಡದಿದ್ದರಂತು ಸಾಧನೆಗೊಂದು ಸಾರ್ಥಕತೆ ಸಿಗುತ್ತದೆ. ಅಂದ ಹಾಗೆ ಹೀಗೆಲ್ಲಾ ಮಾತನಾಡುವುದು ಕೇವಲ ಮಾತಾಗಿರುವುದಿಲ್ಲ ಅದು ಸಾಧಕರನ್ನ ನೆನೆಯುವುದಾಗಿರುತ್ತದೆ ಹಾಗು ಅವರ ಹಾದಿಯನ್ನು ನಾವೂ ಹಿಡಿಯಬಹುದಾದ ಮಾರ್ಗವಾಗಿರುತ್ತದೆ. ತಮಿಳುನಾಡಿನ ರಾಮೇಶ್ವರಂನ ಕಡಲ ಕಿನಾರೆಯ ಮೇಲೆ ನಡೆದಾಡುತ್ತಿದ್ದ ಹುಡುಗನೊಬ್ಬನ ಪೂರ್ವಜರು ಶ್ರೀಮಂತರಾಗಿದ್ದರೂ ವ್ಯವಹಾರದಲ್ಲಾದ ನಷ್ಟದ ಪರಿಣಾಮ ಬಡತನ ಬಂದೊದಗಿದಾಗ ಜೀವನ ನಿರ್ವಹಣೆಗೆ ತನ್ನ ಪೋಷಕರಿಗೆ ನೆರವಾಗಲೋಸುಗ ದಿನಪತ್ರಿಕೆ ಹಂಚುತ್ತಾ ಕಷ್ಟದ ದಿನಗಳನ್ನು ದೂಡುತ್ತಾ ತನ್ನ ಬಾಲ್ಯದಲ್ಲೇ ಹೆಚ್ಚನ ಜವಾಬ್ದಾರಿಯ ಅರಿವನ್ನು ಹೊಂದಿರುತ್ತಾನೆ. ಆ ದಿನ ಯಾರಿಗೂ ತಿಳಿದಿರಲಿಲ್ಲ ಅದೇ ಬಾಲಕ ಭಾರತದ ಕ್ಷಿಪಣಿ ಲೋಕದ ಜವಾಬ್ದಾರಿ ಹೊರುತ್ತಾನೆಂದು, ಭಾರತದ ಶಕ್ತಿ ಎಂತಹದ್ದೆಂದು ವಿಶ್ವಕ್ಕೆ ತೋರಿಸುತ್ತಾನೆಂದು, ಅಷ್ಷೇ ಏಕ...