Posts

Showing posts with the label #Poem #bbksir

ಮುರಿಯಬಾರದೇಕೆ ಮೌನ.... ನನ್ನೊಲವೇ.

  ಮುರಿಯಬಾರದೇಕೆ ಮೌನ.... ನನ್ನೊಲವೇ. ಪದಗಳೊಳಡಗಿದ ಮನವೆ ಮಾತಾಗಬಾರದೇಕೆ ನೀನು. ಮರುಕಳಿಸಿವೆ ಕಳೆದ ನೆನಪುಗಳು  ನೋಟವಾಗಬಾರದೇಕೆ ನೀನು. ಪ್ರತಿ ಹೆಜ್ಜೆಯ  ನಿರೀಕ್ಷೆಯ ಮನವೇ ದ್ವನಿಯಾಗಬಾರದೇಕೆ ನೀನು. ಉಸಿರಿನ ಪ್ರತಿ ಕಣವೂ ನಿನ್ನೆಸರಿನ ಪ್ರತಿಫಲವೇ ಸಂಭ್ರಮಿಸಬಾರದೇಕೆ ನನ್ನೊಲವೇ. ಕ್ಷಣ ಕ್ಷಣಗಳು ಕೂಡ ಮಣರಾಶಿಯ ಬರಿ ನೆನಪೇ ಮುರಿಯಬಾರದೇಕೆ ಮೌನ ನೀನು. 👉ಕುಮಾರ್ ಬಿ ಬಾಗೀವಾಳ್

ಕಾಣುತಿವೆ ನಾಳೆಗಳು.... Kaanuthive naalegalu. A poem by Kumar B Bagival

 ಕಾಣುತಿವೆ ನಾಳೆಗಳು.... ಕಾಣುತಿವೆ ನಾಳೆಗಳು ನಾ ನಡೆವ ಹಾದಿಯಲಿ ನಾನಾಡುವಾ ಮಾತುಗಳ ಮಂದಾಳದಲಿ  ನಾ ಮಾಡುವಾ ಕೃತಿಗಳಾಗಾಸದ ಬೆಳಕಿನಲಿ ನಾ ಸೇರುವಾ ಸಂಘಗಳ ನೆರಳಿನ ತಂಪಿನಲಿ. ಕಾಣುತಿವೆ ನಾಳೆಗಳು ನಾ ನಡೆವ ಹಾದಿಯಲಿ ಎದುರಾದ ಸವಾಲುಗಳನು ನಾ ಎದುರಿಸುವ ರೀತಿಯಲಿ ಒದರಾಡುವ ಗಾಡಿಯಲು ಅಲುಗದೇ ಕುಳಿತು ದಡ ಸೇರುವಲಿ ಆಗಸಕೆ ಹಾರುತಿಹ ಬದುಕ ಗಾಳಿಪಟದ ದಾರದ ಬಿಗಿ ಹಿಡಿತದಲಿ. ಕಾಣುತಿವೆ ನಾಳೆಗಳು ನಾ ನಡೆವ ಹಾದಿಯಲಿ ತಿರುವಿರುವ ದಾರಿಯಲಿ ನಿಯಂತ್ರಣವ ಮಾಡುವಲಿ ಬರವಿರುವ ಭೂವಿಗೊಂದಿಷ್ಟು ನೀರನುಣಿಸುವಲಿ ಕರವಿಡಿದು ಮೇಲೆತ್ತುವಲಿ ಮುಳುಗುವಡಗನು ನೀರಿನಲಿ. ರಚನೆ: ಕುಮಾರ್ ಬಿ ಬಾಗೀವಾಳ್

ನೀನಿಲ್ಲದ ನಾಳೆಗಳು Neenillada naalegalu a poem by Kumar B Bagival

  ನೀನಿಲ್ಲದ ನಾಳೆಗಳು ಮುಡುಪಾಗಿವೆ ನೆನಪುಗಳ ಗೊಂಚಲು, ನಿನಗಾಗಿಯೇ  ಕಾಯ್ದಿರಿಸಿದ ಕ್ಷಣಗಳು. ಪಡುಪಾಡು ಹತ್ತಿ ನಿನಗಾಗಿ ಸುತ್ತಿದ ಗಳಿಗೆಗಳು, ಕಾಡದಿರದವು ನಾಳೆಗಳನು ನೀನಿಲ್ಲದೆ ದಿನವೂ. ಒಡಲ ಸೇರಿದ ಅದೆಷ್ಟು ಸಂಕಟಗಳು, ಬಡಿದಾಡುತ್ತಲಿವೆ ಹೊರಬರಲು ಒಂದೇ ಸಮನೆ ಕಡಿದಾದ ನಿರ್ಣಯವದು ನಿನಗದೇತಕೋ ಬಿಡಿ ಬಿಡಿ ಬೇಡದಿರವು ನಾಳೆಗಳನು ಜೊತೆ ಸೇರಿಕೊಳಲು. ಸಾರಿಹೇಳುತಿವೆ ಕೇಳದ  ಸೊಲ್ಲಿನಲಿ , ಬರಿ ಮೇಲಾಟಗಳ ಸೋಲುಗೆಲುವಗಳಲ್ಲ. ನಿನ್ನನರಿಯುವ ಪರಿಯಲಿ ಬರೆದ ಪತ್ರಗಳ ಸಂಖ್ಯೆಗಳ ಏಣಿಸುತಲಿ ಮಣಿಸದಿರವು ನಾಳೆಗಳನು ನಿನ್ನೊಲವಲೆ. ರಚನೆ : ಕುಮಾರ್ ಬಿ ಬಾಗೀವಾಳ್

ತುಡಿತ Thuditha a poem by Kumar B Bagival

 ತುಡಿತ.. ನೆನೆದ ಮರುಗಳಿಗೆಯಲಿ ಮರಳಿ ಬರುವೆ. ಮನದ ಅನತಿಯಲೆ ಸುಳಿದು ಮೆರೆವೆ. ತೊರೆದು ಹೇಗಿರಲಿ ನವಿರ ಸವಿ ಸಖ್ಯವ ಬೇರೆಲ್ಲವು ಈ ಜಗದಲಿ ನನಗೆ  ನಿನಗಿಂತ ಮುಖ್ಯವಾ? ಅರೆಗಳಿಗೆ ಮರೆತರೂ ಹೊರಳಡಿ ನರಳುವೆ ಸೆರಗಿನಂಚಿನ ಬಂಧಿಯಲಿ ಸೆರೆಯಾಗುವೆ ಸೂರೆ ಹೋಗಿದೆ ಮನಸು ನಿನ್ನ ದಾಳಿಯಲಿ ಸಾರಿ ಹೇಳುವೆ ಎಲ್ಲೂ ಎಲ್ಲೆಲ್ಲೂ ಎಲ್ಲಾ ಪಾಳಿಯಲಿ. ಮಹಾ ಕೂಗದು ನನಗೆ ನಿನ್ನ ಮನದ ಕರೆ ಮೋಹ ಯಾಕದೋ ಗೊತ್ತಿಲ್ಲ ಅದು ಖರೆ ಸುಖಾಸುಮ್ಮನೆ ತಿರುಗುತಿದೆ ನಿನ್ನೊಡನೆ ನನ್ನೊಲವು ಬೇಕಾಗಿದೆ ನನಗೆ ನಿನ್ನ ತುಟಿಯಂಚ ಚೆನ್ನ ಚೆಲುವು. ಕನಸಿಗೂ ಅರ್ಥ ಬೇಕಿದೆ ನನಗೀಗಲೆ ನನಸಾಗಲಿ ಅದು ವ್ಯರ್ಥವಾಗದೆ ಇಂದೀಗಲೆ ಜಪವು ನೆಪವಾಗಿದೆ ಸಂಧಿಸುವ ಕಾರಣಕೆ ನಿನ್ನ ನೆನಹದದೊಂದೇ ಹಿತವು ನನ್ನೀ ಕರಣಕೆ. ಬರುವೆ ಭರವಸೆಯ ಹೊತ್ತು ತರುವೆ ನೆರಳಾಗಿ ಬಿಡದೆ ನಿನ್ನೊಡನೆ ಸದಾ ನಾನಿರುವೆ ಮರುಳಲ್ಲ ಕೇಳಿದು ತುಡಿತವು ಹೃದಯ ಬಡಿತ ಬೆರಳಿಡಿದು ಇಡುವೆ ಸಪ್ತಹೆಜ್ಜೆಯನೆಂಬ ತುಡಿತ‌. ರಚನೆ: ಕುಮಾರ್ ಬಿ ಬಾಗೀವಾಳ್

ಅವಿಚ್ಛಿನ್ನ ನಡೆ ನನದೇ...

  ಅವಿಚ್ಛಿನ್ನ ನಡೆ ನನದೇ... ಗೆಲುವು ನಡೆಯಲೆದ್ದಾಗ ತಡೆಗಾಲುಗಳೇ ಹೆಚ್ಚು ತನ್ನಷ್ಟಕ್ಕೆ ತಾನೇ ಗೆಲುವಿನೊಲವ ತಡೆವ ಹುಚ್ಚು ಬಿಡದೆ ಗೆಲುವೆ ತಡೆದ ಕಾಲನೇ ಗಾಲಿಯಾಗಿಸಿ ಬಿನ್ನವಾಗಿದ್ದರೆ ಎದುರು ಅವಿಚ್ಛಿನ್ನ ನಡೆ ನನದೇ. ಮನಸು ಖುಷಿಯನೊತ್ತು ಸುತ್ತುವಾಗಲೆಲ್ಲಾ ಹುಸಿ ಕನಸುಗಳ ಸಂತೆಯ ಜನಜಂಗುಳಿಗಳು ಬಿರುಸಾಗಿ ಒದರಿ ನಿಂತು ಸೊಗಸಾಗಿ ನಲಿಯುವೆ ಹಸಿರಾಗಿದ್ದರೆ ಉದುರು ಮಳೆಗೆ ಅವಿಚ್ಛಿನ್ನ ಬೆಳೆ ನನದೇ. ಹುಲುಸಾಗಿ ತೆನೆಯೊತ್ತು ಮೈದುಬಿದೆದೆ ಮೆರೆವಾಗಲೆಲ್ಲಾ ಹೊಲಸು ಮಳೆಗೆ ಸುರಿದು ಗರ್ಭದೊಳಿಳಿದು ಪಾತಿಸುವ ಮನಸು ಗರಿಯ ಮುಚ್ಚಿ, ಧೃಡತೆ ಹೆಚ್ಚಿ ಹಡೆದೇ ಹಡೆವೆ  ಹಸಿದೊಡಲ ತುಂಬಿಸುವೆ  ಅವಿಚ್ಛಿನ್ನ ತೃಪ್ತಿ ನನದೆ. ಸಾರಿ ಹೇಳುವ ಸಾಧನೆಯ ಎಂದೆನ್ನುವಾಗಲೇ  ಭಾರೀ ಕರಿನೆರಳ ಛಾಯೆಯಾವರಿಸುವ ಹುಚ್ಚು ತವಕ ಭಾವುಕನಾಗದೇ, ಭಾಷ್ಪವಾಗದೇ ನಿಶ್ಚಿತ ಸಾಗುವೆ ಸಾಧನೆಯ ಶಿಖರವನೇರೇ ಏರುವೆ ಅವಿಚ್ಛಿನ್ನ ಜಯ ನನದೆ . ರಚನೆ : ಕುಮಾರ್ ಬಿ ಬಾಗೀವಾಳ್

ಹೊಚ್ಚ ಹೊಸ ಕನಸು ಇನಿಯ

  ಹೊಚ್ವ ಹೊಸ ಕನಸು ಇನಿಯ. ಹೊಚ್ಚಹೊಸ ಕನಸು ಇನಿಯ ಅಚ್ಚಳಿಯದ ಪಚ್ಚೆ ಹಸಿರು ಮುಚ್ಚಳಿಕೆ ಬರೆದು ಕೊಟ್ಟಿದೆ ಸಾಕ್ಷಿಗೆ. ಮನಸುಖಿಸುವ ಮೆಲ್ಲಮಾತನೊಮ್ಮೆ ಕೇಳಿದ ಆ ಹೊಂಗೆ ಮರವು ಹರಸುವೆನೆಂದು ಹೇಳಿ ಈ  ಭೃಂಗದ ಬೆನ್ನನೇರಿ ಬಂದಿದೆ. ಮುಂಗುರುಳಿಗೆ ಮನವ ಸೋತ  ಆ ಮಲ್ಲಿಗೆ ಮುಡಿಯನೇರಿ ಮದವೇರಿದ ಚೆಲುವು ಕೊಟ್ಟು ಮಧುವ ತುಂಬಲು ತಾ ಬಂದಿದೆ ಮೈಸೋಕಿಸೊ ಹಠಕೆ ಬಿದ್ದ ಈ ಪರ್ಣವು ಮೈನೋಯದೆ ಹಣ್ಣಾಗಿ ಬಿದ್ದು ನೆಲವ ಸೇರಿ   ಮೃಧುವಾಗಿದೆ ಈ ಪಲ್ಲಂಗದಿ. ಹೇಮಂತಕು ಬಿಸಿಯಾಗುವ ಆಸೆ ಹುಟ್ಟಿದೆ, ಸುಡು ಬೇಸಿಗೆಯಲು ಮತ್ತೊಮ್ಮೆ ಮೈಯ ಚಾಚಿ ಮಗ್ಗುಲಾಗಿ ನಾಚಿಕೆಯಲಿ ನೆಲಕಚ್ಚಿದೆ. ಮಧುವನೀರೊ ಪರಿಯ ನೋಡಿ ಆ ಧುಂಬಿಗೆ ಪುಷ್ಪವೊಂದು ಪಾಠ ಹೇಳಿ ತಿಳಿ ನೀನು ಈ ಕಲೆಯ ಎಂದು ಹೇಳಿ ತಲೆಬಗ್ಗಿಸಿ ಮೌನವಾಗಿದೆ. ರಚನೆ : ಕುಮಾರ್. ಬಿ.ಬಾಗಿವಾಳ್

ಮಾತೆಂದರೆ ಅದು ನಿನದೇ ಆಗಿರಬೇಕು.... ರಚನೆ : ಕುಮಾರ್ ಬಿ ಬಾಗೀವಾಳ್

ಮಾತೆಂದರೆ ಅದು ನಿನದೇ ಆಗಿರಬೇಕು…. ಮಾತೆಂದರೆ ಅದು ನಿನದೇ ಆಗಿರಬೇಕು ಪಿಸುಗುಟ್ಟರೂ ಗುಡುಗಿ ನಡುಗಿದ ಹಾಗೆ ಹೊರಟು ತೊಗಟೆಯೊಳಗಿನ ಹಲಸಿನ ಹಾಗೆ ಹೊಲದೊಳಗಿನ ಹೂತಿಟ್ಟ ಮೊಳೆತ ಬೀಜದ ಹಾಗೆ ಮಾತೆಂದರೆ ಅದು ನಿನದೇ ಆಗಿರಬೇಕು ಮೊದಲ ಮಳೆಗೆ ಮೈಯ್ಯೊಡ್ಡಿ ತೋಯ್ದ ಅನುಭವದ ಹಾಗೆ ಚೈತ್ರದಾಗಮನಕೆ ಉದುರಿದೆಲೆ ಮತ್ತೆ ಚಿಗರಿರುವ ಹಾಗೆ ನಸುಕಿನಲಿ ಭಾನ ಬಯಲಿನಲಿ ಆಡಲು ಬಂದ ಬೆಳ್ಳಿಯ ಹಾಗೆ. ಮಾತೆಂದರೆ ಅದು ನಿನದೇ ಆಗಿರಬೇಕು ಹೂವ ಗುಡಿಯೊಳಗಿನ ಘಮಿಸೊ ಘಮದ ಹಾಗೆ ಮಳೆ ಚುಂಬಿಸಿದ ಬಿಸಿಲ ಬೆಳಕ ಬಣ್ಣ ತೆರೆದ ಹಾಗೆ ಕಡೆದ ಮಜ್ಜಿಗೆಯ ಮೇಲೆ ತೇಲುವ ಬೆಣ್ಣೆಯ ಹಾಗೆ ಮಾತೆಂದರೆ ಅದು ನಿನದೇ ಆಗಿರಬೇಕು ತಾನು ಸುಟ್ಟರೂ ಜಗಕೆ ಬೆಳಕನೀವ ದೀಪದ ಹಾಗೆ ತಾನೊಡೆದರೂ ಹಾಲು ಹೆಪ್ಪಾಗಿ ಸೊಂಪಾಗುವ ತುಪ್ಪದ ಹಾಗೆ ತನ್ನೊಡಲು ನೊಂದರೂ ನವಮಾಸ ಕೂಸನೊರುವ ಅಮ್ಮನ ಹಾಗೆ ಆ ಮಾತಿಂದಲೆ ಮನ ಮನೆಗೆ ಬೆಲೆ ಹೊಂಗಿರಣ ಒಮ್ಮೆಲೇ  ತೊಳೆದ ಕತ್ತಲೆ ಹಾಗಿರದಿದ್ದರೆ ಬಾಳುವ ಬದುಕ ಬೆತ್ತಲೆ ಒಮ್ಮೆ ನಿನಗೋಗೊಡುವೆ ನಾ… ಅದು ನಿಜ‌ ಸೆಲೆ. ರಚನೆ : ಕುಮಾರ್ ಬಿ ಬಾಗೀವಾಳ್.