Posts

Thoughts of mind by Kumar B B

ಕಳೆವ ಕ್ಷಣಗಳು ಮುಂದಡಿಯಾಗಬೇಕು ಭವಿತದಲಿ, ಬೆಳೆವ ಪ್ರತಿ ಸಸಿಯು ವರವಾಗಬೇಕು ಭುವಿಯಲಿ, ಒಣಗಿದರೂ ಮರಮುಟ್ಟಾಗಬೇಕು ನೂರ್ಕಾಲ ಭವನದಲಿ, ಬಣಗುಡದಿರಲಿ ಬರಿನೆಲದ ಮೇಲೆ ಕರಿನೆರಳಾಗಿ ಭುವನದಲಿ. - ಕುಮಾರ್ ಬಿ ಬಾಗೀವಾಳ್. ಮರೆತು ಬಿಡು ಮನವೆ ಮಾಗದ ಅದೆಷ್ಟೋ ಕಾಯಿಗಳು ಉದುರಿ ಕೊಳೆತಿವೆ ನೆಲದೊಳಗೆ, ಕೊರಗಿದರಾಗದು ಸರಿ ಎಚ್ಚರಗೊಳ್ಳು ಮನದೊಳಗೆ ನಾಯಿಗಳು ಎಳೆದಾಡಾವು ನೀನು ನೆಲಕುರುಳಿದರೆ ಧರೆಯೊಳಗೆ. ಕುಮಾರ್ ಬಿ ಬಾಗೀವಾಳ್ ಕೊರಗದಿರು ಹೂವೆ ಹಿಡಿಕೆ ಒರಟೆಂದು ಉದುರಿ ಹೋಗುವೆ ಅರಳುವ ಮುನ್ನ ಅದಿರದಿರೆ ಸೇರದೆ ಮುಡಿಯನೋ, ದೇವರ ಗುಡಿಯನೋ. ರಚನೆ : ಕುಮಾರ್ ಬಿ ಬಾಗೀವಾಳ್.

ಕಾಣುತಿವೆ ನಾಳೆಗಳು.... Kaanuthive naalegalu. A poem by Kumar B Bagival

 ಕಾಣುತಿವೆ ನಾಳೆಗಳು.... ಕಾಣುತಿವೆ ನಾಳೆಗಳು ನಾ ನಡೆವ ಹಾದಿಯಲಿ ನಾನಾಡುವಾ ಮಾತುಗಳ ಮಂದಾಳದಲಿ  ನಾ ಮಾಡುವಾ ಕೃತಿಗಳಾಗಾಸದ ಬೆಳಕಿನಲಿ ನಾ ಸೇರುವಾ ಸಂಘಗಳ ನೆರಳಿನ ತಂಪಿನಲಿ. ಕಾಣುತಿವೆ ನಾಳೆಗಳು ನಾ ನಡೆವ ಹಾದಿಯಲಿ ಎದುರಾದ ಸವಾಲುಗಳನು ನಾ ಎದುರಿಸುವ ರೀತಿಯಲಿ ಒದರಾಡುವ ಗಾಡಿಯಲು ಅಲುಗದೇ ಕುಳಿತು ದಡ ಸೇರುವಲಿ ಆಗಸಕೆ ಹಾರುತಿಹ ಬದುಕ ಗಾಳಿಪಟದ ದಾರದ ಬಿಗಿ ಹಿಡಿತದಲಿ. ಕಾಣುತಿವೆ ನಾಳೆಗಳು ನಾ ನಡೆವ ಹಾದಿಯಲಿ ತಿರುವಿರುವ ದಾರಿಯಲಿ ನಿಯಂತ್ರಣವ ಮಾಡುವಲಿ ಬರವಿರುವ ಭೂವಿಗೊಂದಿಷ್ಟು ನೀರನುಣಿಸುವಲಿ ಕರವಿಡಿದು ಮೇಲೆತ್ತುವಲಿ ಮುಳುಗುವಡಗನು ನೀರಿನಲಿ. ರಚನೆ: ಕುಮಾರ್ ಬಿ ಬಾಗೀವಾಳ್

ಸ್ವಗತ... Swagatha a poem on environment by Kumar B Bagival

  ಸ್ವಗತ... ನನ್ನೊಡಲ ಸೇರಿವೆ ಅದೆಷ್ಟೋ  ಆಗದ , ಮಾಗದ,ಅಗಾಧ ವಸ್ತುಗಳು ಗರ್ಭಗುಡಿಯಲಡಗಿಸಿದ್ದು ಯಾರು?  ಸ್ವಗತಿಸುತಿದೆ ತನ್ನಲ್ಲೇ ಇಳೆ ಕೇಳದೇ ಯಾರನು. ಬಸಿರು ತುಂಬ ಉಸಿರಾಗದ ಕಸದ ರಾಶಿ ಹಸಿರು ಮುಖದ ತುಂಬ ಕೊರೆದ ಕೊಳವೆಯ ಗಾಯ ತಿಳಿರಕ್ತವನೇ ಬತ್ತಿದರೂ ಬಿಡದೆ ಹೀರಿ ಕುಡಿದವರು ಯಾರು?  ಸ್ವಗತಿಸುತಿದೆ ತನ್ನಲ್ಲೇ  ಧರೆ ಕೇಳದೇ ಯಾರನು. ನಾ ಕೊಟ್ಟಿದ್ದನ್ನೇ ಕುಡಿದು, ನನ್ನಸಿರನ್ನೇ ಕಡಿದು ನಾ ಕೊಟ್ಟಿದ್ದನ್ನೇ ಉಟ್ಟು, ನನ್ನ ದೇಹಕೇ ಕೊಡಲಿ ಇಟ್ಟು ನಾ ಕೊಟ್ಟಿದ್ದನೇ ತಿಂದು, ನನಗೇ ಕುತ್ತು ತಂದವರು ಯಾರು?  ಸ್ವಗತಿಸುತಿದೆ ತನ್ನಲ್ಲೇ ಭುವಿ ಕೇಳದೇ ಯಾರನು. ನೆಟ್ಟವುಗಳಿಗಿಂತ ಹೆಚ್ಚು ಸುಟ್ಟವುಗಳೇ  ನೀರೆರೆದದ್ದಕ್ಕಿಂತ ಹೆಚ್ಚು ವಿಷವನೆರೆದುದೇ  ಉಳಿಸಿದ್ದಕ್ಕಿಂತ ಹೆಚ್ಚು ಅಳಿಸಿದ್ದೇ ಯಾರು? ಸ್ವಗತಿಸುತಿದೆ ತನ್ನಲ್ಲೇ ಪೃಥ್ವಿ ಕೇಳದೇ ಯಾರನು. ನನಗುಣಿಸಿದ ವಿಷವದು ತನಗೇ ಎಂದು ನನಗೆಣಿಸಿದ ಅಳಿವದು ತನಗೇ ಎಂದು ನನ್ನುಸಿರಡಗಿಸಿದ ಉಸಿರದು ತನ್ನದೇ ಎಂದು ಒಂದನೂ ಅರಿಯದ ಮೂರ್ಖನದು ಯಾರು? ಸ್ವಗತಿಸುತಿದೆ ತನ್ನಲ್ಲೇ ಭೂಮಿ ಕೇಳದೇ ಯಾರನು. ರಚನೆ : ಕುಮಾರ್ ಬಿ ಬಾಗೀವಾಳ್ .

ಸಂಖ್ಯೆಯ ಆಟವಲ್ಲ ನಿನ್ನೊಂದಿಗಿನ ದಿನಗಳು... Sankhyeya aatavalla ninnondigina dinagalu... A poem by Kumara B Bagival

  ಸಂಖ್ಯೆಯ ಆಟವಲ್ಲ ನಿನ್ನೊಂದಿಗಿನ ದಿನಗಳು... ಕರೆದು ಮೊರೆಯಿಟ್ಟರೂ ಓಗೊಡದ ಮನವೆ ಬರೆದು ಹರಿದು ಹಾಕಿರುವೆ ಸಾಲುಗಳ ಪುಟಗಳನೆ ಸರಿದು ದೂರದಿ ನಿಂತು ನೋಡುವೆ ಏತಕೆ ಸುಮ್ಮನೆ ಮುರಿದು ಮೌನವನೊಮ್ಮೆ ಕೂಗಿಬಿಡು ನನ್ನನೊಮ್ಮೆ. ಹರಿವ ದಿನಗಳ ಲೆಕ್ಕವು ಸಿಗವು ನಾಳೆಗಳ ಸಂತೆಯಲಿ ಸುರಿವ ಬಾಷ್ಪದ ನಳವು ನಂದಿಹೋಗುವ ಚಿಂತೆಯಲಿ ಕೊರೆವ ಮಣಭಾರದ ಮನವನೊತ್ತು ಅಲೆಯುತಲಿ ಬರುವ ದಿನಗಳ ಏಣಿಸುತ ಕಾಯ್ವೆನಾ ನಿನದೇ ಜ್ಞಾನದಲಿ. ಅಂಕೆಯ ಮೀರುವ ಸಮುಯದಲಿ ಮಿತಿ ಏರುವ  ಶಂಕೆಯಿಲ್ಲದ ಪ್ರೀತಿಯ ಅಭಿಮಾನದಿ ಸಾರುವ ಸಂಖ್ಯೆಗಳ ಆಟವಷ್ಟೇ ಆಗದಿರಲಿ ನಿನಗೋಸ್ಕರ  ಕಳೆದ ದಿನಗಳು, ಸೊನ್ನೆಯಾದರೂ ಸರಿಬೆಲೆಯಿರಲಿ ದಿನಗಳಿಗೆ. ರಚನೆ : ಕುಮಾರ್ ಬಿ ಬಾಗೀವಾಳ್.

ನೀನಿಲ್ಲದ ನಾಳೆಗಳು Neenillada naalegalu a poem by Kumar B Bagival

  ನೀನಿಲ್ಲದ ನಾಳೆಗಳು ಮುಡುಪಾಗಿವೆ ನೆನಪುಗಳ ಗೊಂಚಲು, ನಿನಗಾಗಿಯೇ  ಕಾಯ್ದಿರಿಸಿದ ಕ್ಷಣಗಳು. ಪಡುಪಾಡು ಹತ್ತಿ ನಿನಗಾಗಿ ಸುತ್ತಿದ ಗಳಿಗೆಗಳು, ಕಾಡದಿರದವು ನಾಳೆಗಳನು ನೀನಿಲ್ಲದೆ ದಿನವೂ. ಒಡಲ ಸೇರಿದ ಅದೆಷ್ಟು ಸಂಕಟಗಳು, ಬಡಿದಾಡುತ್ತಲಿವೆ ಹೊರಬರಲು ಒಂದೇ ಸಮನೆ ಕಡಿದಾದ ನಿರ್ಣಯವದು ನಿನಗದೇತಕೋ ಬಿಡಿ ಬಿಡಿ ಬೇಡದಿರವು ನಾಳೆಗಳನು ಜೊತೆ ಸೇರಿಕೊಳಲು. ಸಾರಿಹೇಳುತಿವೆ ಕೇಳದ  ಸೊಲ್ಲಿನಲಿ , ಬರಿ ಮೇಲಾಟಗಳ ಸೋಲುಗೆಲುವಗಳಲ್ಲ. ನಿನ್ನನರಿಯುವ ಪರಿಯಲಿ ಬರೆದ ಪತ್ರಗಳ ಸಂಖ್ಯೆಗಳ ಏಣಿಸುತಲಿ ಮಣಿಸದಿರವು ನಾಳೆಗಳನು ನಿನ್ನೊಲವಲೆ. ರಚನೆ : ಕುಮಾರ್ ಬಿ ಬಾಗೀವಾಳ್

ಅಮ್ಮಾ ... ನೀನೆ ಶ್ರೇಷ್ಠ. Amma neene shreshta a poem by Kumar B Bagival

google.com, pub-1254641642343099, DIRECT, f08c47fec0942fa0  ಅಮ್ಮಾ... ನೀನೇ ಶ್ರೇಷ್ಠ. (ವಿಶ್ವ ಅಮ್ಮಂದಿರ ದಿನದ ಶುಭಾಶಯಗಳೊಂದಿಗೆ) ಅಮ್ಮಾ ನೀನೆ ಶ್ರೇಷ್ಠ ಜಗದಗಲಕೂ , ನಿನ್ನೊಡಲೇ ಶ್ರೇಷ್ಠ ಜಗದ ಅಗಲದಲ್ಲೂ ಕಡಲಿಗೂ ಮಿಗಿಲು ಭೋರ್ಗರೆತವಿಲ್ಲ ಆಗಸಕೂ ಮಿಗಿಲು ಗುಡುಗಾರ್ಭಟಗಳಿಲ್ಲ ಭುವಿಗೂ ಮಿಗಿಲು ನಡುಗು ಕುಸಿತಗಳಿಲ್ಲ‌. ಅಮ್ಮಾ ನೀನೇ ಶ್ರೇಷ್ಠ ಜಗದಗಲಕೂ , ನಿನ್ನ ಮಡಿಲೇ ಶ್ರೇಷ್ಠ ಜಗದ ಅಗಲದಲ್ಲೂ ಸುಡುವ ಕೆಂಡವೂ ಅಲ್ಲ, ಕೊರೆವ ಚಳಿಯೂ ಇಲ್ಲ ಬಾಡುವ ಹೂವೂ ಅಲ್ಲ  ತೊರೆವ ಕಾಲವೂ ಅಲ್ಲ ಎಲ್ಲಕೂ ಮಿಗಿಲು ಅದುವೆ ಪೊರೆವ ದೈವ ನೆಲೆಯು. ಅಮ್ಮಾ ನೀನೇ ತಾನೆ ಜಗದಗಲಕೂ ಶ್ರೇಷ್ಠ, ನಿನ್ನ ಕೈತುತ್ತೇ ಶ್ರೇಷ್ಠ ಜಗದ ಅಗಲದಲ್ಲೂ ಅಮೃತಕೂ ಮಿಗಿಲು ತಾರತಮ್ಯಗಳಿಲ್ಲ ಬಿತ್ತೋ ಬೀಜಕು ಮಿಗಿಲು ಹುಸಿಯುವ ಮಾತೇ ಇಲ್ಲ ಉತ್ತ ನೆಲಕೂ ಮಿಗಿಲು ತನುವು ಹಾರುವುದೇ ಇಲ್ಲ. ಅಮ್ಮಾ ನೀನೇ ಶ್ರೇಷ್ಠ ಜಗದ ಅಗಲದಲ್ಲೂ ಗುರುವಿಗೂ ಮಿಗಿಲು ಮೊದಲ ಗುರು ನೀನೆ ಹರನಿಗೂ ಮಿಗಿಲು ಪೊರೆವವಳು ನೀನೇ ತಾನೆ ವರಕ್ಕೂ ಮಿಗಿಲು ಹುಸಿಯದ ವರವನೀಡುವವಳು ನೀನೆ ಕರ ಮುಗಿವ ಪ್ರತಿ ಗಳಿಗೆ ಸಲ್ಲುವುದು ಜಗದಿ ನಿನಗೆ ತಾನೆ. ರಚನೆ : ಕುಮಾರ್ ಬಿ ಬಾಗೀವಾಳ್. google.com, pub-1254641642343099, DIRECT, f08c47fec0942fa0

ತುಡಿತ Thuditha a poem by Kumar B Bagival

 ತುಡಿತ.. ನೆನೆದ ಮರುಗಳಿಗೆಯಲಿ ಮರಳಿ ಬರುವೆ. ಮನದ ಅನತಿಯಲೆ ಸುಳಿದು ಮೆರೆವೆ. ತೊರೆದು ಹೇಗಿರಲಿ ನವಿರ ಸವಿ ಸಖ್ಯವ ಬೇರೆಲ್ಲವು ಈ ಜಗದಲಿ ನನಗೆ  ನಿನಗಿಂತ ಮುಖ್ಯವಾ? ಅರೆಗಳಿಗೆ ಮರೆತರೂ ಹೊರಳಡಿ ನರಳುವೆ ಸೆರಗಿನಂಚಿನ ಬಂಧಿಯಲಿ ಸೆರೆಯಾಗುವೆ ಸೂರೆ ಹೋಗಿದೆ ಮನಸು ನಿನ್ನ ದಾಳಿಯಲಿ ಸಾರಿ ಹೇಳುವೆ ಎಲ್ಲೂ ಎಲ್ಲೆಲ್ಲೂ ಎಲ್ಲಾ ಪಾಳಿಯಲಿ. ಮಹಾ ಕೂಗದು ನನಗೆ ನಿನ್ನ ಮನದ ಕರೆ ಮೋಹ ಯಾಕದೋ ಗೊತ್ತಿಲ್ಲ ಅದು ಖರೆ ಸುಖಾಸುಮ್ಮನೆ ತಿರುಗುತಿದೆ ನಿನ್ನೊಡನೆ ನನ್ನೊಲವು ಬೇಕಾಗಿದೆ ನನಗೆ ನಿನ್ನ ತುಟಿಯಂಚ ಚೆನ್ನ ಚೆಲುವು. ಕನಸಿಗೂ ಅರ್ಥ ಬೇಕಿದೆ ನನಗೀಗಲೆ ನನಸಾಗಲಿ ಅದು ವ್ಯರ್ಥವಾಗದೆ ಇಂದೀಗಲೆ ಜಪವು ನೆಪವಾಗಿದೆ ಸಂಧಿಸುವ ಕಾರಣಕೆ ನಿನ್ನ ನೆನಹದದೊಂದೇ ಹಿತವು ನನ್ನೀ ಕರಣಕೆ. ಬರುವೆ ಭರವಸೆಯ ಹೊತ್ತು ತರುವೆ ನೆರಳಾಗಿ ಬಿಡದೆ ನಿನ್ನೊಡನೆ ಸದಾ ನಾನಿರುವೆ ಮರುಳಲ್ಲ ಕೇಳಿದು ತುಡಿತವು ಹೃದಯ ಬಡಿತ ಬೆರಳಿಡಿದು ಇಡುವೆ ಸಪ್ತಹೆಜ್ಜೆಯನೆಂಬ ತುಡಿತ‌. ರಚನೆ: ಕುಮಾರ್ ಬಿ ಬಾಗೀವಾಳ್