ಮಾತಿಗೆ ಬರವಿರುವ ಜಾಗದಲಿ ಮೌನಕೇನು ಕೆಲಸ ?

ಮಾತಿಗೆ ಬರವಿರುವ ಜಾಗದಲಿ ಮೌನಕೇನು ಕೆಲಸ ?

ಮಾತಿಗೆ ಬರವಿರದ ಜಾಗದಲ್ಲಿ ಮೌನಕೇನು ಕೆಲಸ ?
ನೀ ದೂರವಿರು ಸಾಕಾಗಿದೆ ಮುಚ್ಚಿಟ್ಟು ಸುಟ್ಟ ಭಾವನೆಗಳ!
ಕಟ್ಟೆ ಹೊಡೆದಾವು ಬೆಟ್ಟದಷ್ಟಿರೋ ಕಾಡೋ ಕನಸುಗಳು 
ಬಿಟ್ಟುಬಿಡು ನನ್ನನೊಮ್ಮೆ ಬಯಲಿಗೆ ತಿರುಗುವೆ ಮನಸೋಯಿಚ್ಛೆ.
ಬಿಡದಿರೆ ಸಿಟ್ಟಿಗೆದ್ದಾವು ಧಿಕ್ಕರಿಸಿ ನಿನ್ನ ಈ ಕ್ಷಣ ಹೊತ್ತಿನಲೆ.

ಮಾತಿಗೆ ಬರವಿರದ ಜಾಗದಲಿ ಮೌನಕೇನು ಕೆಲಸ ?
ಭೋರ್ಗರೆಯುವ ಅಬ್ಧಿ ಸ್ಥಭ್ದವಾದರೆ ತರವೆ!
ಮಾರ್ದನಿಸುವ ಪಿಸುಗೋಪುರ ತುಸು ನಿಂತರೆ ಸರಿಯೇ?
ಮಳೆನಿಂತರೂ ಮೌನಮುರಿವ ಮರದನಿಗಳು ದನಿಸದಿದ್ದರೆ ಹೇಗೆ?
ಎಂತಾದರೂ ಸರಿಯೇ ಮುಂದಾಡುವ ಮನಧನಿಯೇ ನುಡಿವೆ.

ಮಾತಿಗೆ ಬರವಿರದ ಜಾಗದಲಿ ಮೌನಕೇನು ಕೆಲಸ ?
ಕರಿನೆರಳಿನಾಚೆಗೋಂಗಿರಣ ಬಯಸುವುದು ತಪ್ಪೇ!
ಬರಿದಾದ ಮನದಂಗಳದಿ ರಂಗೋಲಿಯಾಕುವಾಸೆ 
ಉರಿವ ನೇಸರನೊಮ್ಮೆ ಹೊರಸರಿಸಿ ಬೆಳದಿಂಗಳಾಗುವೆ
ತಂಪನೆರೆವೆ ಉಸಿರಬಿಗಿಹಿಡಿದೆದೆಗೆ ಒಮ್ಮೆಲೆ ಎಲ್ಲವನು ಹೇಳಿ.

ಮಾತಿಗೆ ಬರವಿರದ ಜಾಗದಲಿ ಮೌನಕೇನು ಕೆಲಸ ?
ದಾರಿಯುದ್ದಕೂ ಬರಿ ಕುರುಚಲು,ಮುರುಕಲು ಸವೆದ ಹಾದಿ
ಭಾರಿ ಭಾರವನೊತ್ತ ಮನದ ಮೆರವಣಿಗೆ ಬರಹೊರಟರೆ ಹೇಗೆ
ಗುರಿ ಮುಟ್ಟಲು ಒಮ್ಮೆ ಹಾರೇಬಿಡುವೆ ಗಾಳಿ ಬೀಸುವ ದಿಕ್ಕಿಗೊಮ್ಮೆ.
ಬರಿಯ ಬಡಬಡಿಸುವ ಎದೆಯೊತ್ತು ನಡೆದ ದೇಹಕೀಗ ಭಾರವನಿಳಿಸುವೆ.

ರಚನೆ : ಕುಮಾರ್ ಬಿ ಬಾಗೀವಾಳ್.

Comments

Popular posts from this blog

ಮಕರ ಸಂಕ್ರಾಂತಿಯ ನಿಜವಾದ ಆಚರಣೆ ಎಂದು?

ಅಕ್ಕಮಹಾದೇವಿಯವರ ಆಯ್ದ ವಚನಗಳು. Selected Vachanas of Akkamahadevi.

ವೃತ್ತಗಳು CIRCLES